ಶ್ರೀಚಾಮುಂಡೇಶ್ವರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ.ಬಸವರಾಜು ಹಾಗೂ ಎ.ವೆಂಕಟೇಶ್ ನಿರ್ಮಿಸುತ್ತಿರುವ ಚಿತ್ರ ‘ಶೌರ್ಯ. ದರ್ಶನ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಹಾಡೊಂದರ ಚಿತ್ರೀಕರಣ ನಗರದ ರಾಕ್ಲೈನ್ ಸ್ಟುಡಿಯೋದಲ್ಲಿ ನಡೆಯುತ್ತಿದೆ.
ವಿ.ನಾಗೇಂದ್ರಪ್ರಸಾದ್ ಬರೆದಿರುವ ‘ಹೇ ಬಂದೂಕು ಹೇ ಬಂದೂಕು ಮಾಮ - ಆಸೆಗೆ ಫ಼ೈನ್ ಹಾಕೋದಿಲ್ಲ - ಹೇ ಕಿಲಾಡಿ ಮಾಮ ಹೇ ಕಿಲಾಡಿ ಮಾಮ - ಆಸೆಗೆ ಲೈಸನ್ಸು ಕೇಳೋರಿಲ್ಲಾ.‘ ಎಂಬ ಹಾಡಿಗೆ ದರ್ಶನ್ ಮುಮೈತ್ ಖಾನ್ ಜೊತೆ ಹೆಜ್ಜೆ ಹಾಕಿದ್ದಾರೆ. ಪ್ರದೀಪ್ ಅಂತೋಣಿ ನೃತ್ಯ ಸಂಯೋಜಿಸಿರುವ ಈ ಗೀತೆಯಲ್ಲಿ ಸಂಪತ್ಕುಮಾರ್, ಜಾನ್ಕೋಕಿನ್ ಹಾಗೂ ರಷ್ಯನ್ ನೃತ್ಯಗಾರರೂ ಅಭಿನಯಿಸಿದ್ದಾರೆ.
ಈ ಹಾಡಿನ ಚಿತ್ರೀಕರಣಕ್ಕೆ ಸುಮಾರು ೪೫ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಸಾಧುಕೋಕಿಲಾ ಅವರು ಸಂಗೀತ ನೀಡುವುದರೊಂದಿಗೆ ನಿರ್ದೇಶನದ ನಿರ್ವಹಣೆಯನ್ನೂ ಮಾಡುತ್ತಿದ್ದಾರೆ. ರಮೇಶ್ಬಾಬು ಛಾಯಾಗ್ರಹಣ, ಜೋನಿಹರ್ಷ ಸಂಕಲನ, ಕೆ.ವಿ.ರಾಜು ಸಂಭಾಷಣೆ, ಪಳನಿರಾಜ್, ರವಿವರ್ಮ ಸಾಹಸ, ಪ್ರದೀಪ್ ಅಂತೋಣಿ ನೃತ್ಯ, ಇಸ್ಮಾಯಿಲ್ ಕಲಾ ನಿರ್ದೇಶನ, ಸುನೀಲ್ ಪಾಳ್ಯ ಸಹ ನಿರ್ದೇಶನ ಹಾಗೂ ಅನಿಲ್ಕುಮಾರ್ ನಿರ್ಮಾಣ ನಿರ್ವಹಣೆಯಿರುವ ‘ಶೌರ್ಯ‘ ಚಿತ್ರದ ತಾರಾಬಳಗದಲ್ಲಿ ದರ್ಶನ್, ರಿಮಾ ವರ್ಮ, ಮುಮೈತ್ ಖಾನ್, ಓಂಪ್ರಕಾಶ್, ಬುಲೆಟ್ ಪ್ರಕಾಶ್, ಸಂಪತ್ಕುಮಾರ್, ಜಾನ್ಕೋಕಿನ್, ಅವಿನಾಶ್, ರಮೇಶ್ಭಟ್, ಚಿತ್ರಾಶೆಣೈ ಮುಂತಾದವರಿದ್ದಾರೆ.